ಹುಬ್ಬಳ್ಳಿ: ಅರ್ಚಕ ದೇವೇಂದ್ರಪ್ಪ ಕೊಲೆ ಪ್ರಕರಣ; ಆರೋಪಿ ಬಂಧನ ಕುಟುಂಬದಲ್ಲಿ ಮೇಲಿಂದ ಮೇಲೆ ಸಾವುಗಳ‌‌ ಸಂಭವಿಸಿದ್ವು. ಆ ಸಾವುಗಳಿಗೆ ಇದೇ ಅರ್ಚಕ ದೇವೇಂದ್ರಪ್ಪ ಹೊನ್ನಳ್ಳಿ ಕಾರಣ ಎಂದು ಆರೋಪಿ ನಂಬಿದ್ದ. ದೇವೇಂದ್ರಪ್ಪ ಬ್ಲಾಕ್ ಮ್ಯಾಜಿಕ್ ಮಾಡುತ್ತಿದ್ದ, ಅದೇ ಕಾರಣಕ್ಕೆ ತನ್ನ ಕುಟುಂಬದಲ್ಲಿ ತೊಂದರೆ ಆಗುತ್ತಿದೆ ಎಂದು‌ ನಂಬಿದ್ದ. ಹುಬ್ಬಳ್ಳಿ: ಹುಬ್ಬಳ್ಳಿಯ ಈಶ್ವರನಗರದ ದಕ್ಷಿಣ ವೈಷ್ಣೋದೇವಿ ಮಂದಿರದ ಬಳಿ ಅರ್ಚಕ ದೇವೇಂದ್ರಪ್ಪ ಮಹದೇವಪ್ಪ ವನಹಳ್ಳಿ (63) ಅವರನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನು ಪೊಲೀಸರು ಮಂಗಳವಾರ ಬಂಧನಕ್ಕೊಳಪಡಿಸಿದ್ದಾರೆ.ಆರೋಪಿಯನ್ನು ಕಮರಿಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಜಿ ಅಡ್ಡಾ ನಿವಾಸಿ ಸಂತೋಷ ತಿಪ್ಪಣ್ಣ ಭೋಜಗಾರ (44) ಎಂದು ಗುರುತಿಸಲಾಗಿದೆ.ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ್‌ ಮಾತನಾಡಿ, ಅರ್ಚಕ ದೇವೇಂದ್ರಪ್ಪ ಅವರನ್ನು ಜುಲೈ 21ರಂದು ಸಂಜೆ ಚಾಕು ಇರಿದು ಕೊಲೆ ಮಾಡಲಾಗಿತ್ತು. ಪ್ರಕರಣ ನವನಗರ ಠಾಣೆಯಲ್ಲಿ ದಾಖಲಾಗಿದ್ದು, ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಎರಡು ವರ್ಷದ ಹಿಂದೆಯೂ ದೇವಪ್ಪಜ್ಜ ಅವರನ್ನು ಕೊಲೆಗೆ ಯತ್ನಿಸಲಾಗಿತ್ತು. ಅಂದಿನ ಹಾಗೂ ಈಗಿನ ಸಿಸಿಟಿವಿ ವಿಡಿಯೊ ದೃಶ್ಯ ಪರಿಶೀಲಿಸಿ, ಅನುಮಾನಾಸ್ಪದ ವ್ಯಕ್ತಿಯ ಚಿತ್ರವನ್ನು ಮಾಧ್ಯಮಗಳಿಗೆ ನೀಡಲಾಗಿತ್ತು. ಅದನ್ನು ನೋಡಿದ ವ್ಯಕ್ತಿಯೊಬ್ಬರು ಆರೋಪಿ ಗುರುತು ಪತ್ತೆ ಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಚನ್ನಮ್ಮ ವೃತ್ತದಲ್ಲಿ ಸೋಮವಾರ ರಾತ್ರಿ 11ರ ವೇಳೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹೇಳಿದರು.ಆರೋಪಿ ಸಂತೋಷ ಕೋವಿಡ್ ಪೂರ್ವ ವಾಹನ ಶುಚಿಗೊಳಿಸುವ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಆಟೋ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಆರೋಪಿಯ ಕುಟುಂಬದಲ್ಲಿ ಮೇಲಿಂದ ಮೇಲೆ ಸಾವುಗಳ‌‌ ಸಂಭವಿಸಿದ್ವು. ಆ ಸಾವುಗಳಿಗೆ ಇದೇ ಅರ್ಚಕ ದೇವೇಂದ್ರಪ್ಪ ಹೊನ್ನಳ್ಳಿ ಕಾರಣ ಎಂದು ನಂಬಿದ್ದ. ದೇವೇಂದ್ರಪ್ಪ ಬ್ಲಾಕ್ ಮ್ಯಾಜಿಕ್ ಮಾಡುತ್ತಿದ್ದ, ಅದೇ ಕಾರಣಕ್ಕೆ ತನ್ನ ಕುಟುಂಬದಲ್ಲಿ ತೊಂದರೆ ಆಗುತ್ತಿದೆ ಎಂದು‌ ನಂಬಿದ್ದ. ಕೊಲೆಗೆ ಎರಡು ಮೂರು ವರ್ಷಗಳಿಂದ ಪ್ಲಾನ್ ಮಾಡಿಕೊಂಡಿದ್ದ, ಈ ಹಿಂದೆ 2022 ರಲ್ಲೂ ಹತ್ಯೆಗೆ ಯತ್ನ ನಡೆಸಿದ್ದ. ಆದರೆ, ದೇವಪ್ಪಜ್ಜ ಅದೃಷ್ಟವಶಾತ್ ದಾಳಿಯಿಂದ ಬದುಕುಳಿದಿದ್ದ.ಈ ಘಟನೆ ಬಳಿಕ ಪೊಲೀಸರು ಆರೋಪಿ ಪತ್ತೆಗೆ ಸಾಕಷ್ಟು ಪ್ರಯತ್ನ ನಡೆಸಿದ್ದರೂ ಯಶಸ್ವಿಯಾಗಿರಲಿಲ್ಲ. ಇದಾದ 2 ವರ್ಷಗಳಿಂದ ಸುಮ್ಮನಿದ್ದು, ಅರ್ಚಕನ ಚಲನವಲನಗಳ ಮೇಲೆ ಆರೋಪಿ ನಿಗಾ ಇರಿಸಿ, ಅವಕಾಶಕ್ಕಾಗಿ ಕಾದು ಕುಳಿತಿದ್ದ. ಆರೋಪಿ ಊರಲ್ಲೇ ಇದ್ದುದ್ದರಿಂದ ಖಚಿತ ಮಾಹಿತಿ ಮೇರೆಗೆ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಈವರೆಗಿನ ತನಿಖೆಯಲ್ಲಿ ಕೊಲೆ‌ ಆರೋಪಿ ಸಂತೋಷ ಒಬ್ಬನೇ ಆಗಿರುವುದು ಕಂಡು ಬಂದಿದೆ. ಅವನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದೇವೆ. ಕೃತ್ಯ ನಡೆದ ನಂತರ ಧರಿಸಿದ ಜರ್ಕಿನ್ ಹಾಗೂ ಚಾಕು ಎಸೆದಿರುವುದಾಗಿ ಹೇಳಿದ್ದಾನೆ. ಅವುಗಳನ್ನು ವಶಪಡಿಸಿಕೊಂಡು, ಎಲ್ಲ ದೃಷ್ಟಿಕೋನದಲ್ಲೂ ತನಿಖೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.